ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದಲ್ಲಿ ಸಾಲ ಸೌಲಭ್ಯ ಕೊಡಿಸುವುದಾಗಿ ವಂಚಿಸಿ ನಾಮ ಹಾಕಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದಲ್ಲಿ ಫಲಾನುಭವಿಗಳಿಗೆ ಸಾಲ ಸೌಲಭ್ಯವನ್ನು ಕೊಡಿಸುವುದಾಗಿ ಹೇಳಿ 40 ಲಕ್ಷ ಹಣವನ್ನು ವಂಚನೆ ಮಾಡಿ ಪರಾರಿಯಾಗಿರುವ ಘಟನೆ ಗುಬ್ಬಿ ತಾಲೂಕಿನಲ್ಲಿ ನಡೆದಿದೆ.
ಮಹರ್ಷಿ ವಾಲ್ಮೀಕಿ ಸಂಘದ ತಾಲೂಕು ಅಧ್ಯಕ್ಷ ಗುರುಸ್ವಾಮಿ ಮಾತನಾಡಿ ನಿಗಮ ಮಂಡಳಿಯಲ್ಲಿ ಸಾಲ ಸೌಲಭ್ಯವನ್ನು ಕೊಡಿಸುವುದಾಗಿ ಹೇಳಿ ನಂಬಿದ ಜನತೆಯಿಂದ 10ಲಕ್ಷ ವಂಚನೆ ಮಾಡಿದ್ದೇನೆ ಎಂದು ಕುಮುದಾ ಚೇಲನೊಬ್ಬ ಹೇಳಿದ್ದಾನೆ ಅದು 10 ಲಕ್ಷವಲ್ಲ 40 ಲಕ್ಷ ಹಣವನ್ನು ಫಲಾನುಭವಿಗಳಿಂದ ನನ್ನ ಸಂಬಂಧಿ ಕುಮುದಾ ಎಂಬಾಕೆಯ ಖಾತೆಗೆ ಜಮೆ ಮಾಡಿರುವುದಾಗಿ ತಿಳಿಸಿದ ಅವರು ಗುಬ್ಬಿ ತಾಲೂಕಿನ ವಾಲ್ಮೀಕಿ ಬಂಧುಗಳ ಮುಖಾಂತರ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕುಮುದಾ ಎಂಬಾಕೆ ನಿಗಮದಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿದ್ದು, ಕಳೆದ ಒಂದೂವರೆ ವರ್ಷದಿಂದ ನಿಗಮ ಮಂಡಳಿ ವತಿಯಿಂದ ಎಸ್.ಟಿ. ಜನಾಂಗಕ್ಕೆ ಸೌಲಭ್ಯ ಒದಗಿಸಲಾಗುತ್ತದೆ ಎಂದು ಹೇಳಿದ್ದರು ಎಂದು ತಿಳಿಸಿದರು.
ತಾಲೂಕಿನ ವಾಲ್ಮೀಕಿ ಜನಾಂಗದವರಿಗೆ ಸೌಲಭ್ಯವನ್ನು ಒದಗಿಸುವ ನಿಟ್ಟಿನಲ್ಲಿ ತಾಲೂಕಿನಲ್ಲಿ ಜಮೀನು ಇದ್ದು ಸೌಲಭ್ಯದಿಂದ ವಂಚಿತರಾಗಿದ್ದ ನನ್ನ ಸಮಾಜದ ಬಂಧುಗಳನ್ನು ಗುರ್ತಿಸಿ 50ರಿಂದ 60 ಮಂದಿಗೆ ಫಲಾನುಭವಿಗಳ ಪಟ್ಟಿಯನ್ನು ಮಂಡಳಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕುಮುದಾ ಅವರಿಗೆ ನೀಡಿದ್ದು, ಮಂಡಳಿಯಿಂದ 5ಲಕ್ಷ ಹಣವನ್ನು ನೀಡುತ್ತೇವೆ ಅದರಲ್ಲಿ 50 ಸಾವಿರ ಹಣವನ್ನು ಫಲಾನುಭವಿಗಳು ನೀಡಬೇಕಾಗುತ್ತದೆ ಎಂದು ತಿಳಿಸಿದ ಹಿನ್ನೆಲೆಯಲ್ಲಿ ಸೌಲಭ್ಯವನ್ನು ಒದಗಿಸುವ ಸಲುವಾಗಿ ಸಮಾಜದ ಬಂಧುಗಳಿಂದ ಹಣವನ್ನು ಪಡೆದು ಆ ಹಣವನ್ನು ಕುಮುದಾ ಅವರಿಗೆ ಫೋನ್ ಪೇ ಮುಖೇನ ಕಳುಹಿಸಿ ಕೊಟ್ಟಿದ್ದೇನೆ ಎಂದು ತಿಳಿಸಿದ್ದಾರೆ.
ಕುಮುದಾ ಎಂಬಾಕೆ ನನ್ನ ಸಂಬಂಧಿಕರಾದ ಕಾರಣ ಅವರನ್ನು ನಂಬಿ ಫಲಾನುಭವಿಗಳಿಗೆ ನಿಗಮದಿಂದ ಸಿಗುವ ಸೌಲಭ್ಯವನ್ನು ಒದಗಿಸುವ ನಿಟ್ಟಿನಲ್ಲಿ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಜಾತಿ ಪ್ರಮಾಣ ಪತ್ರ ಜೊತೆಗೆ ಭಾವಚಿತ್ರವನ್ನು ನೀಡಲಾಗಿತ್ತು. ಕೆಲವು ದಿನಗಳ ಬಳಿಕ ಮಂಡಳಿಯಿಂದ ಮಂಜೂರಾದ ಪ್ರಮಾಣ ಪತ್ರದಲ್ಲಿ 4.5ಲಕ್ಷ ಸಹಾಯಧನ ಬರಲಿದ್ದು, ಮುಂಗಡವಾಗಿ ಫಲಾನುಭವಿಗಳು 50ಸಾವಿರ ಹಣವನ್ನು ಪಾವತಿಸಿದರೆ 5ಲಕ್ಷ ವೆಚ್ಚದಲ್ಲಿ ಬೋರ್ವೆಲ್ ಕೊರೆಸಿಕೊಡಲಾಗುತ್ತದೆ ಎಂದು ನಂಬಿಸಿದ ಹಿನ್ನೆಲೆ ಆಯ್ಕೆ ಪಟ್ಟಿಯಲ್ಲಿರುವ ಫಲಾನುಭವಿಗಳಿಂದ ತಲಾ 50ಸಾವಿರ ಹಣವನ್ನು ಪಡೆದು ಆಕೆಯ ಅಕೌಂಟ್ ಗೆ ಹಣ ವರ್ಗಾವಣೆ ಮಾಡಿದ್ದಾಗಿ ತಿಳಿಸಿದರು.
ಕೆಲವು ದಿನಗಳ ಬಳಿಕ ಸೌಲಭ್ಯವು ವಿಳಂಬವಾದ ಕಾರಣ ಕೇಂದ್ರ ಕಚೇರಿಗೆ ತೆರಳಿ ವಿಚಾರ ಮಾಡಿದ ವೇಳೆ ಅದು ಸುಳ್ಳು ಎಂಬ ಮಾಹಿತಿ ಲಭ್ಯವಾಯಿತು. ತಕ್ಷಣ ಆಕೆಯನ್ನು ಸಂಪರ್ಕಿಸಿದ ವೇಳೆ ಸರಿಯಾದ ಉತ್ತರ ದೊರೆಯದೆ ಇರುವ ವೇಳೆ ಜಿಲ್ಲಾ ಕೇಂದ್ರಕ್ಕೆ ತೆರಳಿ ಮಾಹಿತಿಯನ್ನು ಕೇಳಲು ಹೋದರೆ ಆಕೆಯ ಸಹಚರರಾದ ಮಾರಪ್ಪ ಹಾಗೂ ಶ್ರೀಧರ್ ನಾಯಕ್ ಎಂಬುವವರು ಫಲಾನುಭವಿಗಳನ್ನು ಕರೆಸಿ ಬೆದರಿಕೆ ಹಾಕಿಸಿರುತ್ತಾಳೆ ಎಂದು ದೂರಿದ ಅವರು ನನ್ನ ಸುಫರಿಗೆ 10ಲಕ್ಷ ಹಣವನ್ನು ನೀಡಿರುವ ಬಗ್ಗೆ ಮಾಹಿತಿಯಿದ್ದು, ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಲಿದ್ದು ನನ್ನ ರಕ್ಷಣೆ ಜೊತೆಗೆ ನ್ಯಾಯವನ್ನು ಒದಗಿಸಿ ಕೊಡುವಂತೆ ಮನವಿ ಮಾಡಿದ್ದಾರೆ.
ನನ್ನ ನಂಬಿ ನನ್ನ ಸಮಾಜದ ಬಂಧುಗಳು ಸಾಲ ಸೌಲಭ್ಯ ಕಲ್ಪಿಸಲು ಹಣವನ್ನು ನೀಡಿರುವುದು ಸತ್ಯ, ಆದರೆ ಅವರಿಗೆ ಅನ್ಯಾಯ ಮಾಡಬಾರದೆಂದು ಅರಿತು ನಾನು ನನ್ನ ಸ್ವಂತ ಜಮೀನು ಮನೆಯನ್ನು ಮಾರಾಟ ಮಾಡಿ ಹಣ ವಾಪಸ್ ಮಾಡುತ್ತಾ ಇದ್ದು ಈಗಾಗಲೇ 70ರಷ್ಟು ಹಣವನ್ನು ವಾಪಸ್ ಮಾಡಿದ್ದೇನೆ ಎಂದ ಅವರು ಸಂಬಂಧಪಟ್ಟ ಅಧಿಕಾರಿಗಳು ನನಗೆ ಆಗಿರುವ ಅನ್ಯಾಯ ಹಾಗೂ ನನ್ನ ಸುಪಾರಿ ಗೆ 10 ಲಕ್ಷ ಹಣವನ್ನು ನೀಡಿದ್ದಾರೆ ಎಂಬ ಮಾಹಿತಿ ಇದ್ದು, ನನ್ನ ರಕ್ಷಣೆಯ ಜೊತೆಗೆ ನನಗೆ ಆಗಿರುವ ಅನ್ಯಾಯವನ್ನು ಸರಿಪಡಿಸುವಂತೆ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಫಲಾನುಭವಿಗಳಾದ ಬಸವರಾಜ್, ಶ್ರೀನಿವಾಸ್, ನಟರಾಜ್, ನಾಗಣ್ಣ, ಕೃಷ್ಣಪ್ಪ, ಶಂಕರಮ್ಮ ಉಪಸ್ಥಿತರಿದ್ದರು.
ವರದಿ : ವೀರಭದ್ರಯ್ಯ
