ಗುಬ್ಬಿ : ಕುರಿ ಕೊಟ್ಟಿಗೆಗೆ ನುಗ್ಗಿದ ಚಿರತೆ ಎರಡು ಕುರಿಗಳನ್ನು ಬಲಿ ಪಡೆದು ಅದರಲ್ಲಿನ ಒಂದು ಕುರಿಯನ್ನು ಹೊತ್ತೊಯ್ದ ಘಟನೆ ಮಂಗಳವಾರ ತಡರಾತ್ರಿ ಗುಬ್ಬಿ ತಾಲ್ಲೂಕಿನ ಕಸಬಾ ಹೋಬಳಿ ಜಿ.ಹೊಸಹಳ್ಳಿ ಗ್ರಾಪಂ ವ್ಯಾಪ್ತಿಯ ಮಡೇನಹಳ್ಳಿ ಗ್ರಾಮದಲ್ಲಿ ನಡೆದಿದೆ.ಗ್ರಾಮದ ರೈತರಾದ ಚಿಕ್ಕತಾಯಮ್ಮ ಕರೆರಂಗಯ್ಯ ಅವರ ಕೊಟ್ಟಿಗೆಗೆ ನುಗ್ಗಿದ ಚಿರತೆ ಹತ್ತು ಕುರಿಗಳ ಮೇಲೆ ದಾಳಿ ನಡೆಸಿ, ಈ ಪೈಕಿ ಎರಡು ಕುರಿಗಳ ಬಲಿ ಪಡೆದು ಒಂದು ಕುರಿಯನ್ನು ಹೊತ್ತೊಯ್ದ ಘಟನೆ ತಡ ರಾತ್ರಿ ನಡೆದಿದೆ.
ಕುರಿ ಸಾಕುವ ಕಾಯಕದಲ್ಲಿರುವ ಈ ಬಡ ಕುಟುಂಬ ಜೀವನೋಪಾಯಕ್ಕೆ ಇದ್ದ ಕುರಿಗಳನ್ನು ಕಳೆದುಕೊಂಡು ಸಾವಿರಾರು ರೂಗಳ ನಷ್ಟ ಅನುಭವಿಸಿ ಮರಳಿ ಚಿರತೆ ದಾಳಿ ನಡೆಯಬಹುದು ಎಂಬ ಆತಂಕದಲ್ಲಿದೆ.ಹಲವು ದಿನಗಳಿಂದ ಈ ಭಾಗಗಳಲ್ಲಿ ಚಿರತೆ ದಾಳಿ ನಡೆಯುತ್ತಿರುವುದು ಸ್ಥಳೀಯ ರೈತರಲ್ಲಿ ಆತಂಕ ಮೂಡಿಸಿದೆ.
ಪದೇ ಪದೇ ಗ್ರಾಮದ ಸುತ್ತ ಮುತ್ತ ಚಿರತೆ ಹಾವಳಿ ಹೆಚ್ಚಾಗಿರುವ ಬಗ್ಗೆ ದೂರುಗಳು ಸಾಕಷ್ಟು ಕೇಳಿಬರುತ್ತಿದ್ದು, ಚಿರತೆಗಳ ಉಪಟಳವನ್ನು ತಪ್ಪಿಸಬೇಕು ಎಂದು ಮಡೇನಹಳ್ಳಿ ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

