ಚಿಕ್ಕನಾಯಕನಹಳ್ಳಿ : ದೇವಸ್ಥಾನ ಬೀಗ ಮುರಿದು ಹುಂಡಿಹಣ, ಚಿನ್ನ,ಬೆಳ್ಳಿ ಒಡವೆಗಳ ಕಳವು.
ತಾಲೂಕಿನ ಕಂದಿಕೆರೆ ಹೋಬಳಿ ತಿಮ್ಮನಹಳ್ಳಿ ಗ್ರಾಮದ ಶ್ರೀ ಆಂಜನೇಯ ಸ್ವಾಮಿ, ಮತ್ತು ಸಿದ್ದನ ಕಟ್ಟೆ ಗ್ರಾಮದ ಶ್ರೀ ಶ್ರೀನಿವಾಸ, ಆಂಜನೇಯ ಸ್ವಾಮಿಯ ದೇವಾಲಯದಲ್ಲಿ ಒಂದೇ ದಿನ ನಡು ರಾತ್ರಿ ವೇಳೆ ಸರಣಿ ಕಳ್ಳತನ ಮಾಡೋ ಮೂಲಕ ಕಳ್ಳರು ತಮ್ಮ ಕೈ ಚಳಕ ತೋರಿರುವ ಘಟನೆ ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ತಿಮ್ಮನಹಳ್ಳಿ ಗ್ರಾಮದ ನಾಗರಾಜು,ಟಿ.ಎ. ಬಿನ್ ಹೊರಕೇರಪ್ಪ ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿನ ದೂರಿನ ಅನ್ವಯ , ಆಂಜನೇಯ ಸ್ವಾಮಿ ವಿಗ್ರಹದ 3 ಚಿನ್ನದ ತಾಳಿ ಹಾಗೂ ಗುಂಡುಗಳು 35 ಗ್ರಾಂ, ಒಟ್ಟು 1 ಲಕ್ಷ ರೂಗಳು, ಹಾಗೂ ಬೆಳ್ಳಿಯ ವಡವೆ ದೇವರ ಸೊಂಟದ ಪಟ್ಟಿ, ನಾಗಭರಣ ಮುಖವಾಡ, ಪ್ರಭಾವಳಿ 2, ಮುಖ ಪದ್ಮ, 08 ಛತ್ರಿಗಳು ಒಟ್ಟು 4 ಕೆಜಿ 250 ಗ್ರಾಂ ಬೆಳ್ಳಿ ವಡವೆ ಅಂದಾಜು ಬೆಲೆ 1,06, 000 ರೂ ಗಳಾಗಿದ್ದು ಒಟ್ಟು 2,06,000 ರೂ ಆಗಿದೆ.
ಹಾಗೂ
ಸಿದ್ದನ ಕಟ್ಟೆ ಗ್ರಾಮದ ಎನ್ ಚಂದ್ರಯ್ಯ ಬಿನ್ ನರಸಿಂಹ ಗೌಡ ದೂರಿನ ಅನ್ವಯ ಶ್ರೀ ಶ್ರೀನಿವಾಸ ಶ್ರೀ ಆಂಜನೇಯ ದೇವಸ್ಥಾನದ ಬೇಗ ಮುರಿದು ಅಂದಾಜು 1,09,000 ರೂಗಳ ದೇವರ ಚಿನ್ನ ಬೆಳ್ಳಿಯ ವಡವೆಗಳನ್ನು ಕಾಣಿಕೆ ಹುಂಡಿಯ ಹಣ ಕದ್ದಿರುವುದಾಗಿ ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನಾ ಸ್ಥಳಕ್ಕೆ ತುಮಕೂರು ಜಿಲ್ಲೆಯ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು, ಚಿಕ್ಕನಾಯಕನಹಳ್ಳಿಯ ಆರಕ್ಷಕ ಸಿಬ್ಬಂದಿ ಎರಡು ಗ್ರಾಮಗಳಿಗೆ ಭೇಟಿ ನೀಡಿ ಸ್ಥಳ ಮಹಾಜಾರ ಮಾಡಿ ಪ್ರಕರಣ ದಾಖಲಿಸಿಕೊಂಡು ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.
ಸ್ಥಳಕ್ಕೆ ಎ ಎಸ್ ಐ.ಶ್ರೀನಿವಾಸ್, ಜಿಲ್ಲಾ ಬೆರಳಚ್ಚು ಸಬ್ ಇನ್ಸ್ಪೆಕ್ಟರ್ ಮಂಜುನಾಥ್, ಕ್ರೈಂ ಸಿಬ್ಬಂದಿ ಚಂದ್ರಶೇಖರ್, ರಾಮನಾಯ್ಕ್ ಪೋಲಿಸ್ ಹಾಜರಿದ್ದರು.
ವರದಿ : ಚಿಕ್ಕನಾಯಕನಹಳ್ಳಿ ಚಂದ್ರು.
