ಚಿಕ್ಕನಾಯ್ಕನಹಳ್ಳಿ : ಪಟ್ಟಣದ ತಾಲೋಕು ಕಛೇರಿ ನ್ಯಾಯಾಲಯ ಸಭಾಂಗಣದಲ್ಲಿ ಶಾಸಕರು ಹಾಗೂ ಕಾನೂನು ಸಚಿವರಾದ ಜೆ ಸಿ ಮಾಧುಸ್ವಾಮಿ ಅವರ ಅಧ್ಯಕ್ಷತೆ ಯಲ್ಲಿ ಪಟ್ಟಣದಲ್ಲಿರುವ ಇತಿಹಾಸ ಪ್ರಸಿದ್ಧ ಹಳೇಯೂರು ಆಂಜನೇಯಸ್ವಾಮಿ ದೇವಸ್ಥಾನದ ಅಭಿವೃದ್ಧಿ ಹಾಗೂ ಜೀರ್ಣೋದ್ಧಾರ ಕಾಮಗಾರಿ ವಿಚಾರವಾಗಿ ಸಮಿತಿ ಮತ್ತು ಭಕ್ತಾದಿಗಳೊಂದಿಗೆ ಸಭೆ ಕರೆಯಲಾಗಿತ್ತು.
ಸಭೆಯಲ್ಲಿ ಶ್ರೀ ಹಳೆಯೂರು ಆಂಜನೇಯಸ್ವಾಮಿ ದೇವಸ್ಥಾನದ ಸಮುದಾಯ ಭವನ ನಿರ್ಮಾಣಕ್ಕೆ ಮುಜರಾಯಿ ಇಲಾಖೆ 3 ಕೋಟಿ ರೂ ಬಿಡುಗಡೆ ಮಾಡಿರುವುದಾಗಿ ಭಕ್ತರು ಹಾಗೂ ಸಮಿತಿಯವರಿಗೆ ಸಚಿವರು ತಿಳಿಸಿದರು.
ಯಾವ ಜಾಗದಲ್ಲಿ ಹೇಗೆ ಕಟ್ಟಡ ನಿರ್ಮಿಸಬೇಕೆಂದು ಅಭಿಪ್ರಾಯ ಕೇಳಿದರು.
ದೇವಸ್ಥಾನ ಕಮಿಟಿಯ ಪ್ರಶಾಂತ ಕುಮಾರ್ ಶೆಟ್ಟಿ,ಲವಕುಮಾರ್,ಭವನ ನಿರ್ಮಾಣಕ್ಕೆ ಲಭ್ಯವಿರುವ ಜಾಗದ ಬಗ್ಗೆ ವಿವರಿಸಿದರು. ಜಾಗ ಹಾಗೂ ಭವನ ನಿರ್ಮಾಣದ ಆಗು ಹೋಗು ಗಳ,ಮತ್ತು ಅಗತ್ಯದ ಬಗ್ಗೆ ,ಭಕ್ತಾದಿಗಳಾದ ರಘುಪತಿ,ಅಂಕನಹಳ್ಳಿಶ್ರೀನಿವಾಸ್ ಸಿ ಡಿ ರವಿ ಮಾತನಾಡಿದರು.
ಕಲ್ಯಾಣ ಮಂಟಪ ನಿರ್ಮಾಣಕ್ಕೆ ಅಷ್ಟೂ ಹಣ ಬಳಸಿಕೊಳ್ಳುವುದು, ಹಾಗೂ ಭಕ್ತರು, ಸಾರ್ವಜನಿಕರಿಂದ ಬರುವ ದಾನ, ಧರ್ಮದ ಹಣದಲ್ಲಿ ಅಡುಗೆ ಮನೆ, ಊಟದ ಹಾಲ್ ನಿರ್ಮಿಸುವುದು, ಇದನ್ನೆಲ್ಲ ನೋಡಿಕೊಳ್ಳಲು ಮೇಲುಸ್ತುವಾರಿ ಸಮಿತಿ ರಚಿಸುವುದು, ಅದಕ್ಕೆ ಸದಸ್ಯರ ಪಟ್ಟಿ ಸಿದ್ಧಪಡಿಸುವ ಹೊಣೆಯನ್ನು ಸಚಿವರಿಗೆ ಬಿಡಲು ನಿರ್ಧರಿಸಲಾಯಿತು.
ದೇವಾಲಯ ಸಮಿತಿಯವರು ನೀಡಿದ ಸಲಹೆ, ಸೂಚನೆಗಳ್ನಾಧರಿಸಿ, ನೀರುಬಾವಿ ಶಾಲೆ ಬಳಿ ಖಾಲಿ ಜಾಗ ಅಳತೆ ಮಾಡಿಸಿ, ವಾಸ್ತುಶಿಲ್ಪಿ ಕರೆತಂದು ಯೋಜನೆ ಸಿದ್ದಪಡಿಸಿ ಟೆಂಡರ್ ಕರೆದು ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡುವಂತೆ ಪುರಸಭೆ ಮುಖ್ಯಾಧಿಕಾರಿ ಶ್ರೀನಿವಾಸ್, ಪಿಡಬ್ಲ್ಯುಡಿ ಎಂಜಿನಿಯರ್ಗಳಿಗೆ ಸಚಿವರು ಸೂಚಿಸಿದರು.
ವಿಧಾನಸಭೆ ಚುನಾವಣೆ ಘೋಷಣೆ ಆಗುವುದರೊಳಗೆ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭವಾಗಬೇಕು ಎಂದು ಅಧಿಕಾರಿ ಮತ್ತು ಸಮಿತಿಗೆ ಸೂಚಿಸಿದರು.
ತಹಸೀಲ್ದಾರ್ ಬಿ.ತೇಜಸ್ವಿನಿ ಮಾತನಾಡಿ, ತಾಲೂಕಿನಲ್ಲಿ ಇತರೆ ಯಾವ ದೇವಾಲಯಕ್ಕೂ ನೀಡಿರದಷ್ಟು ದೊಡ್ಡ ಮೊತ್ತದ ಅನುದಾನ ಹಳೆಯೂರು ಆಂಜನೇಯ ದೇಗುಲಕ್ಕೆ ಮಂಜೂರಾಗಿದೆ ಎಂದು ತಿಳಿಸಿದರು. ಸಚಿವರು ದೇಗುಲಕ್ಕೆ ಅನುದಾನ ಮಂಜೂರು ಮಾಡಿಸಿರುವುದಕ್ಕೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಧರ್ಭದಲ್ಲಿ ಪುರಸಭಾ ಮುಖ್ಯಾಧಿಕಾರಿ ಶ್ರೀನಿವಾಸ್,
ಪಿ ಡಬ್ಲ್ಯೂ ಡಿ ಇಂಜಿನಿಯರ್ ರವಿಕುಮಾರ್, ಪುರಸಭಾ ಸದಸ್ಯ ರಾಜಶೇಖರ್, ಮುಖಂಡ ಇಟ್ಟಿಗೆ ರಂಗಸ್ವಾಮಿ, ನಾಮಿನಿ ಸದಸ್ಯ ಮಿಲಿಟರಿ ಶಿವಣ್ಣ, ಮಲ್ಲಿಕಾರ್ಜುನ ಸ್ವಾಮಿ, ಸೇರಿದಂತೆ ಭಕ್ತರು ಸಭೆಯಲ್ಲಿ ಉಪಸ್ಥಿತರಿದ್ದರು.
ವರದಿ : ಚಿಕ್ಕನಾಯಕನಹಳ್ಳಿ, ಚಂದ್ರು.
