ಚಿಕ್ಕನಾಯಕನಹಳ್ಳಿ : ಆರ್ ಎಸ್ ಎಸ್ ಕಟ್ಟಾಳು, ಮಾಜಿ ಶಾಸಕರಾದ ಕೆ ಎಸ್ ಕಿರಣ್ ಕುಮಾರ್ ಅವರು ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ರಾಜೀನಾಮೆ ಪತ್ರ ಬರೆದಿರುವ ಕಿರಣ್ ಕುಮಾರ್ ಅವರು ವೈಯಕ್ತಿಕ ಕಾರಣದಿಂದಾಗಿ ರಾಜೀನಾಮೆ ಸಲ್ಲಿಸುತ್ತಿದ್ದು ರಾಜೀನಾಮೆ ಅಂಗೀಕರಿಸುವಂತೆ ಮನವಿ ಮಾಡಿದ್ದಾರೆ.
ಸೋಮವಾರ ಬೆಂಗಳೂರಿನಲ್ಲಿ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ.
ಕಿರಣ್ ಕುಮಾರ್ ಅವರ ಸಾವಿರಾರು ಬೆಂಬಲಿಗರು ಸೋಮವಾರ ಬೆಂಗಳೂರಿಗೆ ತೆರಳಿ ಕಿರಣ್ ಕುಮಾರ್ ಜೊತೆ ಕೈ ಹಿಡಿಯಲಿದ್ದಾರೆ.
ಕಳ್ಳಂಬೆಳ್ಳ ಕ್ಷೇತ್ರದಲ್ಲಿ ಬಿಜೆಪಿಯನ್ನು ಕಟ್ಟಿ ಟಿ ಬಿ ಜಯಚಂದ್ರ ಅವರ ವಿರುದ್ಧ ಗೆಲುವು ಸಾಧಿಸುವ ಮೂಲಕ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಆರಿಸಿದ ಕೀರ್ತಿ ಕಿರಣ್ ಕುಮಾರ್ ಅವರಿಗೆ ಸಲ್ಲುತ್ತದೆ. ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಜಿಲ್ಲಾಧ್ಯಂತ ಬಿಜೆಪಿ ಬಲಪಡಿಸಲು ಶ್ರಮಿಸುವ ಮೂಲಕ ನಿಷ್ಠಾವಂತ ಕಾರ್ಯಕರ್ತ ಎಂಬ ಹೆಗ್ಗಳಿಕೆಗೆ ಪಾತರಾಗಿದ್ದರು.
ಈಗ ದಿಡೀರ್ 30 ವರ್ಷಗಳ ಒಡನಾಟದ ಬಿಜೆಪಿ ಪಕ್ಷವನ್ನ ಬಿಟ್ಟು ಕಾಂಗ್ರೆಸ್ ಸೇರ್ಪಡೆಯಾಗಿರುವುದು ಬಿಜೆಪಿ ಪಾಲಿಗೆ ಆಘಾತದ ಸುದ್ದಿಯಾಗಿದೆ. ಅಲ್ಲದೆ ಸಮರ್ಥ ನಾಯಕತ್ವ ಇಲ್ಲದೆ ಕಳೆಗುತ್ತಿದ್ದ ಚಿಕ್ಕನಾಯಕನಹಳ್ಳಿ ಕಾಂಗ್ರೆಸ್ ಪಕ್ಷಕ್ಕೆ ಸಮರ್ಥ ನಾಯಕತ್ವ ಸಿಕ್ಕಿದಂತಾಗಿದೆ.

